Submission 657

ಪುಲ್ವಾಮಾ ದಾಳಿ – ಮನೆಯ ಸ್ಥಿತಿ

ರಚನೆ : ಡಾ॥ ಹರ್ಷ ಮಿಶ್ರಿಕೋಟಿ

----------------------------------

ಕ್ಷಣದಲೇ ಛಿದ್ರವಾಯ್ತು, ಮೂಳೆಮಾಂಸ ಮುದ್ದೆಯಾಯ್ತು. ಹೇಡಿನಡೆಯ ಕಳ್ಳ ಕೊಲೆಗೆ, ಹಾರಿ ಪ್ರಾಣ ವೀರವಾಯ್ತು. ಕಣ್ಣಲೊಂದು ಹನಿಯ ತೋರು, ಮಾಂಸಮುದ್ದೆಯಾಗಿ ನೋಡು! ಮಡದಿ ಮನಕೆ ಸಿಡಿಲು ಎರಗಿ, ಕುಲುಮೆ ಕಾವು ಎದೆಗೆ ಬಂತು. ಒಲವ ಹೂವು ಕ್ಷಣದಿ ಬಾಡಿ, ಕನಸ ಗುಂಪು ಚದುರಿ ಹೋಯ್ತು. ಅಂಚಲೊಂದು ಹನಿಯ ತೋರಿ, ಎದೆಯ ಕುಲುಮೆ ನೆನೆದು ನೋಡು! ಅಳುವ ಜನರ ಕಂಡ ಕಂದ ಗೊಂದಲಗಳ ಗೂಡಾಯಿತು. ಧೀರ ಭುಜದ ಅಂಬಾರಿಯು ಮರಳದೆಂದು ತಿಳಿಯದಾಯ್ತು ಕೆನ್ನೆ ಮೇಲೆ ಹನಿಯ ಹರಿಸಿ ಗೊಂದಲ-ಗೂಡಾಗಿ ನೋಡು! ತಾಯಿ ಕರುಳು, ಬೇನೆಯಿಂದ ಹಿಂಡಿ ಸೊರಗಿ ಸಪ್ಪಗಾಯ್ತು. ತುತ್ತನಿಟ್ಟು ಬೆಳೆದ ಜೀವ ಮರಳಿ ಬರದೆ ಕಷ್ಟವಾಯ್ತು. ಬಾಯಿ ತುಂಬ ಬಟ್ಟೆ ಕಚ್ಚಿ ಹಿಂಡುಗರುಳ ನೋವ ಕಾಣು! ಕಂಬನಿ ಧಗಧಗಿಸಿ ಬತ್ತಿ ಗಂಟಲುಬ್ಬಿ ಗಟ್ಟಿಯಾಯ್ತು ಊರುಕೋಲು ಉರುಳಾಗಿ ಊರ ಮರುಕ ತಂದೆಗಾಯ್ತು ಜಾರಿ ಬೀಳುವ ಹನಿಯ ತಡೆದು ಗಂಟಲುಬ್ಬಿ ಅಳದೆ ನೋಡು!

----------------------------------

ನೋಂದಣಿ ಐಡಿ : KPF-S1-5275

0
Votes
143
Views
1 Year
Since posted

Finished since 350 days, 0 hours and 46 minutes.

Scroll to Top